ಬೀದರ. ಮಾ.11 :
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ ಅವರಿಗೆ ಸದ್ಯ ಕೆಲಸದಿಂದ ಅಮಾನತಿನಲ್ಲಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರಭುದಾಸ ಜಾಧವ ಎಂಬುವರು ಚಪ್ಪಲಿಯಿಂದ ಹೊಡೆದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.
ಅಕ್ರಮ ಎಸಗಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದಡಿ ಔರಾದ್ ತಾಲ್ಲೂಕಿನ ಸುಂದಾಳ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದ ಪ್ರಭುದಾಸ ಜಾಧವನನ್ನು ಜನವರಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆಲಸದಿಂದ ಅಮಾನತುಗೊಳಿಸಿದ್ದಾರೆ.
ಕೆಲಸಕ್ಕೆ ಮರು ನಿಯೋಜನೆಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಉಪಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ ಅವರ ಚೇಂಬರ್ಗೆ ಹೋಗಿದ್ದಾರೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಪ್ರಭುದಾಸ ಜಾಧವ ಕೋಪೋದ್ರಿಕ್ತನಾಗಿ ಸೂರ್ಯಕಾಂತ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆನಂತರ ಚಪ್ಪಲಿಯಿಂದ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ‘ ಈಶಾನ್ಯ ಟೈಮ್ಸ್’ಗೆ ತಿಳಿಸಿದ್ಧಾರೆ.
ಈ ಕುರಿತು ಜಿಪಂ ಸಿಇಒ ಡಾ. ಗಿರೀಶ್ ದಿಲೀಪ್ ಬದೋಲೆ ಅವರನ್ನು ‘ ಈಶಾನ್ಯ ಟೈಮ್ಸ್ ‘ ಸಂಪರ್ಕಿಸಿದಾಗ, ‘ನನ್ನ ಪಕ್ಕದಲ್ಲಿರುವ ಉಪಕಾರ್ಯದರ್ಶಿಯವರ ಚೇಂಬರ್ನೊಳಗೆ ಜೋರಾಗಿ ಮಾತನಾಡಿಸುವ ಶಬ್ದ ಕೇಳಿ ಬಂದಿದೆ. ವಾಸ್ತವದಲ್ಲಿ ಅಲ್ಲಿ ಏನಾಗಿದೆ ಗೊತ್ತಿಲ್ಲ. ಆದರೆ, ಇಬ್ಬರ ನಡುವೆ ಗಲಾಟೆ ಆಗಿರುವುದು ನಿಜ. ಅಲ್ಲಿರುವ ಸಿಸಿಟಿವಿ ಪರಿಶೀಲಿಸಿ, ಘಟನೆ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದ್ದಾರೆ.