ಹಿಂದುಳಿದ ಜಾತಿಯವನಾಗಿರುವುದು ತಪ್ಪಾ, ಅಭಿವೃದ್ಧಿ ಮಾಡುವುದು ತಪ್ಪಾ,ನನಗೆ ಕಳಂಕ ತರಲು ಪಿತೂರಿ ನಡೆಸುವರಿಗೆ ಜನರೇ ಉತ್ತರ ನೀಡಿ: ಸಿದ್ದರಾಮಯ್ಯ
ಮಾನ್ವಿ: ರಾಜ್ಯದ ಎಲ್ಲಾ ವರ್ಗದ ಜನರ ಪರವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುವುದು ತಪ್ಪಾ ಪಂಚ ಗ್ಯಾರೆಂಟಿಗಳನ್ನು ಜಾರಿಗೊಳಿಸಿರುವುದು ತಪ್ಪಾ ಅಥವಾ ನಾನು ಹಿಂದುಳಿದ ಜಾತಿಯಲ್ಲಿ ಹುಟ್ಟಿರುವುದೇ ತಪ್ಪಾ ಹೇಳಿ ನನ್ನ ಹಾಗೂ ನನ್ನ ಪತ್ನಿ ಮೇಲೆ ಕಳಂಕ ತರಲು ಹೊರಟಿರುವ ಬಿಜೆಪಿ, ಜೆಡಿಎಸ್ ಪಕ್ಷದವರಿಗೆ ಜನತೆ ತಕ್ಕ ಉತ್ತರ ನೀಡಬೇಕು. ನಾನು ಯಾವುದಕ್ಕೂ ಜಗ್ಗೂದಿಲ್ಲ ಬಗ್ಗೂದಿಲ್ಲ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಬಾ ಭಾವನಾತ್ಮಕ ಮಾತುಗಳನ್ನಾಡಿದರು. ಪಟ್ಟಣದ ಹೊರವಲಯದ ಸೂರ್ಯಫಂಕ್ಷನ್ ಬಳಿ ಮಾನ್ವಿ ಕ್ಷೇತ್ರದಲ್ಲಿ 458 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಬೃಹತ್ ಸ್ವಾಭಿಮಾನಿ ಸಮಾವೇಶ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನ್ವಿ ವಿಧಾನಸಭೆ ಕ್ಷೇತ್ರದ 458 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು 1686 ಕೋಟಿ ವೆಚ್ಚದಲ್ಲಿ 87 ಕಿ.ಮೀ.ಉದ್ದದ ಚತುಷ್ಪಥ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಪಂಚ ಗ್ಯಾರೆಂಟಿಗಳಾದ ಶಕ್ತಿ ಯೋಜನೆಗೆ 300 ಕೋಟಿ, ಗೃಹಲಕ್ಷ್ಮೀ ಯೋಜನೆಯಡಿ 121 ಕೋಟಿ ಕುಟುಂಬಗಳಿಗೆ ,2 ಸಾವಿರ ರೂ. ಹಾಗೂ ಗೃಹಜ್ಯೋತಿ ಯೋಜನೆಯ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಗಾಗಿ 160 ಕೋಟಿ ಮತ್ತು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ.ಅಕ್ಕಿ ಹಾಗೂ ಇನ್ನೂ 5 ಕೆ.ಜಿ.ಅಕ್ಕಿ ಬದಲು ಪ್ರತಿ ಕೆ.ಜಿ.ಗೆ 170 ರೂ.ಗಳನ್ನು ನೀಡಲಾಗುತ್ತಿದೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಕೂಡಾ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಅನೇಕ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ರಾಜ್ಯದ ಎಲ್ಲಾ ವರ್ಗದ ಬಡವರ ಏಳ್ಗೆಗೆ ಹಾಗೂ ಆರ್ಥಿಕ ಸಧೃಡರನ್ನಾಗಿಸಲು ಮತ್ತು ಮಹಿಳೆಯರ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವುದು ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರಿಗೆ ಹೊಟ್ಟೆ ಉರಿ, ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಇಂತಹ ಅಭಿವೃದ್ಧಿ ವಿರೋಧಿ ಬಿಜೆಪಿ, ಜೆಡಿಎಸ್ ನವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇವರು ಏನೇ ಆರೋಪ ಮಾಡಿದರು ಕೂಡಾ ನಾನು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ. ನನಗೆ ಜನ ಬೆಂಬಲ ಇರುವರೆಗೂ ನಾನು ಜನರಿಗೋಸ್ಕರ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಅಬ್ಬರಿಸಿದರು.
ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ, ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿಗಳಾಗಿರುವ ಬಿಜೆಪಿ ಪಕ್ಷ ಹಾಗೂ ಬಿಜೆಪಿ ಮುಖಂಡರಿಂದ ಸಾಮಾಜಿಕ ನ್ಯಾಯ, ಸಮಾನತೆಯನ್ನು ನಿರೀಕ್ಷಿಸಲು ಆಸಾಧ್ಯವೇ ಸರಿ. ಬಿಜೆಪಿ ಆಡಳಿತಾವಧಿಯಲ್ಲಿ ಇಡೀ ಸಂಪತ್ತನ್ನೆ ಲೂಟಿ ಮಾಡಿದರು. ಹೆಚ್.ಡಿ.ಕುಮಾರಸ್ವಾಮಿ ಕೊಟ್ಟ ಕುದುರೆಯನ್ನು ಏರದವನು ಧೀರನು ಅಲ್ಲ ಶೂರನು ಅಲ್ಲ ಇಂತಹ ಹೊಟ್ಟೆ ಉರಿ ನಾಯಕನಿಂದ ಏನನ್ನು ನಿರೀಕ್ಷಿಸಬಹುದು ಎಂದು ಹೆಚ್ ಡಿಕೆ ವಿರುದ್ಧ ಕಿಡಿಕಾರಿದರು.
ಈ ವೇಳೆ ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಸಕ ಹಂಪಯ್ಯನಾಯಕ ಸಾಹುಕಾರ ಸ್ವಾಗತಿಸಿದರು. ಸಚಿವರಗಳಾದ ಹೆಚ್.ಸಿ.ಮಹಾದೇವಪ್ಪ, ಕೆ.ಹೆಚ್.ಮುನಿಯಪ್ಪ, ಸತೀಶ ಜಾರಕಿಹೊಳಿ, ಶಿವರಾಜ ತಂಗಡಗಿ, ಡಾ.ಶರಣಪ್ರಕಾಶಪಾಟೀಲ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಹೆಚ್.ಸಿ.ಬಾಲಕೃಷ್ಣ, ಎ.ವಸಂತಕುಮಾರ, ಶರಣೇಗೌಡ ಬಯ್ಯಾಪುರು, ಡಾ.ಚಂದ್ರಶೇಖರ ಪಾಟೀಲ್, ಬಸನಗೌಡ ಬಾದರ್ಲಿ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ವಿರೇಶ, ಉಪಾಧ್ಯಕ್ಷೆ ಮೀನಾಕ್ಷಿ ರಾಮಕೃಷ್ಣ, ಮುಖಂಡರಾದ ರವಿಬೋಸರಾಜು, ಚಂದ್ರಶೇಖರ ಕುರ್ಡಿ, ಕಿರಿಲಿಂಗಪ್ಪ, ರಾಜಶೇಖರನಾಯಕ, ಎ.ಬಾಲಸ್ವಾಮಿ ಕೊಡ್ಲಿ, ಗಪೂರಸಾಬ್, ಸೈಯದ್ ಖಾಲಿದ್ ಖಾದ್ರಿ, ಅಕ್ಬರಸಾಬ್, ಕೆ.ಬಸವಂತಪ್ಪ, ಜಯಣ್ಣ, ಜಿ.ಶಿವಮೂರ್ತಿ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಲಕ್ಷ್ಮೀದೇವಿನಾಯಕ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
ಮನವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಬಿಜೆಪಿ ಪಕ್ಷದ ವತಿಯಿಂದ ಮಾಜಿಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರನಾಯಕ, ಜೆಡಿಎಸ್ ಪಕ್ಷದ ಮಾಜಿಶಾಸಕ ರಾಜಾವೆಂಕಟಪ್ಪನಾಯಕ, ರೈತಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಜನಸೇವಾ ಫೌಂಡೇಷನ್, ದಲಿತ ಸಂಘಟನೆಗಳು ಸೇರಿದಂತೆ ಅನೇಕರು ಮನವಿ ಪತ್ರಗಳನ್ನು ನೀಡಿದರು.