ಸಿ0ಧನೂರು.ಅ.14: ಚುನಾವಣೆ ಘೋಷಣೆಯಾಗುವದಕ್ಕಿಂತಲೂ ಪೂರ್ವದಲ್ಲಿ ಮತದಾರರ ಯಾದಿ ಪ್ರಕಟಣೆ ಮಾಡಿ, ಎಲ್ಲಾ ನೌಕರರಿಗೆ ಮಾಹಿತಿ ಕೊಡುವಂತೆ ನಾವು ಮನವಿ ಮಾಡಿಕೊಂಡರು ಹಾಲಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಯಾದಿ ಕೊಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿತ್ತಾರೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗಪ್ಪ ಮುರುಡಿ ಆರೋಪ ಮಾಡಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಸಾರೆ ಅಧ್ಯಕ್ಷರಾದರೂ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಚಂದ್ರಶೇಖರ್ ಹಿರೇಮಠ ವಾಮ ಮಾರ್ಗಕ್ಕೆ ಇಳಿದಿದ್ದಾರೆ ರಾಜ್ಯ ಸರ್ಕಾರಿ ನೌಕರರ ಚುನಾವಣೆ ನಡೆಯುತ್ತಿದ್ದು, ಚಂದ್ರಶೇಖರ್ ಹಿರೇಮಠ ಬೈಲಾದ ನಿಯಮಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವಾಮ ಮಾರ್ಗದಿಂದ ಪುನಃ ಗೆಲ್ಲಲೇಬೇಕೆಂದು ಅವೈಜ್ಞಾನಿಕವಾಗಿ ಮತದಾರರ ಯಾದಿ ತಯಾರು ಮಾಡಿ ಶಿಕ್ಷಕರಿಗೆ ನಾಲ್ಕು ಸ್ಥಾನಗಳ ಸ್ಪರ್ಧೆಗೆ ಅವಕಾಶ ಇರುವುದನ್ನು ಕಡಿತಗೊಳಿಸಿ ತಾಲೂಕು ಪಂಚಾಯತಿ ಮತ್ತು ಕಂದಾಯ ಇಲಾಖೆಗೆ ಕೊಟ್ಟಿರುವುದು ಅಕ್ಷಮ್ಯ ಅಪರಾಧ ಎಂದರು.
ಚುನಾವಣೆ ಅಧಿಕಾರಿಯನ್ನಾಗಿ ತಹಶೀಲ್ದಾರ್ ಅವರನ್ನು ಅಥವಾ ಸರ್ಕಾರಿ ನೌಕರರನ್ನು ನೇಮಕ ಮಾಡಬೇಕಾಗಿತ್ತು. ಅದನ್ನು ಗಾಳಿಗೆ ತೂರಿ ಯಾರು ತಮಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸುತ್ತಾರೋ ಅಂತಹವರಿಗೆ ಚುನಾವಣೆ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಇಷ್ಟೆಲ್ಲ ಮಾಡಿರುವುದು ಪುನಃ ವಾಮ ಮಾರ್ಗದಿಂದ ಅಧ್ಯಕ್ಷ ಸ್ಥಾನಕ್ಕೆ ಏರುವ ಆಸೆ ಇಟ್ಟುಕೊಂಡಿದ್ದಾರೆ. ಕೂಡಲೇ ಅವೈಜ್ಞಾನಿಕವಾಗಿ ಚುನಾವಣೆ ನಡೆಸುತ್ತಿರುವುದು ನಿಲ್ಲಿಸಿ ಪಾರದರ್ಶಕವಾದ ಚುನಾವಣೆ ನಡೆಸುವಂತೆ ಒತ್ತಾಯಿಸಿದರು. ನಂತರ ಕೆ.ಮಲ್ಲಪ್ಪ, ಪರಶುರಾಮ ಸೇರಿದಂತೆ ಇನ್ನಿತರರು ಮಾತನಾಡಿ, ತಾಲೂಕು ನೌಕರರ ಸಂಘದ ಅಧ್ಯಕ್ಷರ ನಡೆಯನ್ನು ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊನಮ್ಮ, ರಾಮದಾಸ್ ನಾಯಕ್, ಅಂಬಮ್ಮ, ಪ್ರಭಾಕರ್ ಕುಲಕರ್ಣಿ, ಅಲ್ಲಾಹುದ್ದಿನ್, ವೀರೇಶ ಸಾಸಲಮರಿ, ಜ್ಯೋತಿಲಕ್ಷ್ಮಿ, ಮಲ್ಲಪ್ಪ ಬಿ ಮುಂತಾದವರಿದ್ದರು.