ಕಲಬುರಗಿ,ಆ.೨೦ : ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಭಾಷೆಯನ್ನೆ ಬರೆದ ೩೭೧ಜೆ ಕಾಯ್ದೆ ಜಾರಿಗೆ ಬಂದು ಇದೀಗ ದಶಮಾನೋತ್ಸವ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಪ್ರದೇಶದಲ್ಲಿ ಸಂಭ್ರಮಾಚರಣೆ ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಹೇಳಿದರು.
ಮಂಗಳವಾರ ಇಲ್ಲಿನ ಐವಾನ್-ಎ–ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ೩೭೧ಜೆ ಪರಿಣಾಮ ಪ್ರದೇಶದಲ್ಲಿ ಕಳೆದ ಒಂದು ದಶಕದಲ್ಲಿ ಹಲವಾರು ಗಮನಾರ್ಹ ಬದಲಾವಣೆ ಕಂಡಿದೆ. ಈ ನಿಟ್ಟಿನಲ್ಲಿ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ಇದಕ್ಕೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ ವಿರೋ ದಪಕ್ಷದ ನಾಯಕರನ್ನು ಸಹ ಆಹ್ವಾನಿಸಲಾಗುವುದು ಎಂದರು.
ಡಾ.ಮಲ್ಲಿಕಾರ್ಜುನ ಖರ್ಗೆ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ಕಾಯ್ದೆ ಜಾರಿಗೆ ಬಂದಿದೆ. ೩೭೧ಜೆ ಕಾಯ್ದೆಯ ಪರಿಣಾಮವಾಗಿ ಇಂದಿಲ್ಲಿ ಏರ್ ಪೋರ್ಟ್ ಸ್ಥಾಪಿಸಲಾಗಿದೆ. ೩೭೧ ಹಾಸಿಗೆಯ ಜಯದೇವ ಆಸ್ಪತ್ರೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಟ್ರಾಮಾ ಸೆಂಟರ್ ಉದ್ಘಾಟನೆಯಾಗಿದ್ದು, ಇಂದಿರಾಗಾAಧಿ ಮಕ್ಕಳ ಆಸ್ಪತ್ರೆ ಮುಂದಿನ ದಿನದಲ್ಲಿ ಬರಲಿದೆ. ಕಿದ್ವಾಯಿ ಆಸ್ಪತ್ರೆ ಕಟ್ಟಡ ವಿಸ್ತೀರ್ಣಗೊಳ್ಳಲಿದೆ. ಬೃಹತ್ ಇ.ಎಸ್.ಐ.ಸಿ ಕಟ್ಟಡ ಸ್ಥಾಪನೆಯಾಗಿದೆ. ಹಲವು ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಮೂಲಕ ಕಲಬುರಗಿಯನ್ನು ಮೆಡಿಕಲ್ ಹಬ್ ಆಗಿ ಪರಿವರ್ತಿಸಲಾಗಿದೆ. ಇದರಿಂದ ಪ್ರದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ. ಇದರಿಂದ ರೋಗಿಗಳು ಚಿಕಿತ್ಸೆಗೆ ಹೈದ್ರಾಬಾದ್, ಬೆಂಗಳೂರು, ಮುಂಬೈ ಹೋಗುವುದನ್ನು ತಪ್ಪಲಿದೆ ಎಂದರು.
ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ,ಕಾರ್ಮಿಕರಿಗೆ ಸನ್ಮಾನ: ನಾಡಿನ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಇತ್ತೀಚೆಗೆ ೧೯ನೇ ಕ್ರಸ್ಟ್ ಗೇಟ್ ಆಕಸ್ಮಿಕವಾಗಿ ಕಳಚಿಬಿದ್ದ ಕಾರಣ ದೊಡ್ಡ ಆತಂಕವೇ ಅಲ್ಲಿ ಸೃಷ್ಠಿಯಾಗಿತ್ತು. ಇಂಜಿನೀಯರ್, ಕಾರ್ಮಿಕರ, ತಜ್ಞರು ಹಾಗೂ ಅಧಿಕಾರಿಗಳ ಸತತ ಶ್ರಮದಿಂದ ಐದೇ ದಿನದಲ್ಲಿ ಕ್ರಸ್ಟ್ ಗೇಟ್ ಯಶಸ್ವಿಯಾಗಿ ಬದಲಾಯಿಸಿ ರೈತರ ಆತಂಕ ದೂರ ಮಾಡಲಾಗಿದೆ. ಮುಂದೆ ಮಳೆ ಹೆಚ್ಚಿರುವ ಕಾರಣ ಜಲಾಶಯ ಭರ್ತಿಯಾಗುವ ಎಲ್ಲಾ ಆಶಾಭಾವನೆ ಇದ್ದು, ಶೀಘ್ರವೇ ಕ್ರಸ್ಟ್ ಗೇಟ್ ಅಳವಡಿಕೆಗೆ ಜೀವದ ಹಂಗು ತೊರೆದು ಶ್ರಮಿಸಿದ ಎಲ್ಲಾ ಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷರು ಮತ್ತು ಅಫಜಲಪೂರ ಶಾಸಕ ಎಂ.ವೈ.ಪಾಟೀಲ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಸಂಸದ ರಾಮಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೇದಾರ, ಎ.ವಸಂತಕುಮಾರ ಇದ್ದರು.